Saturday 5 September 2015

ಶ್ರೀ ಕೃಷ್ಣಾಷ್ಟಮಿ ಶುಭಾಶಯಗಳು..



ಶ್ರೀ ಕೃಷ್ಣ ಜನ್ಮಾಷ್ಟಮಿ/ಗೋಕುಲಾಷ್ಟಮಿ ಹಬ್ಬವನ್ನು ಶ್ರವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನ ಆಚರಿಸುತ್ತಾರೆ. ಇದು ಶ್ರೀ ಕೃಷ್ಣನ ಜನ್ಮದಿನ. ಭಗವಾನ್ ಮಹಾವಿಷ್ಣುವಿನ ಎ೦ಟನೆಯ ಅವತಾರವಾಗಿ ಶ್ರೀ ಕೃಷ್ಣನು ಅ೦ದು ರೋಹಿಣಿ ನಕ್ಷತ್ರದಲ್ಲಿ ಚ೦ದ್ರೋದಯ ಸಮಯದಲ್ಲಿ ಮಥುರಾದ ವಸುದೇವ ಮತ್ತು ದೇವಕಿಯರ ಮಗನಾಗಿ ಜನಿಸಿದ. ಭಾರತ ಹಾಗೂ ವಿದೇಶೀ ನೆಲದಲ್ಲಿಯೂ ಪ್ರಖ್ಯಾತವಾಗಿದೆ ಶ್ರೀ ಕೃಷ್ಣ ಜನ್ಮಾಷ್ಟಮಿ/ಗೋಕುಲಾಷ್ಟಮಿ ಆಚರಿಸಲಾಗುತ್ತದೆ  ಕೃಷ್ಣನ ಭಕ್ತರುವಿಶ್ವದ ನಾನಾ ಮೂಲೆಗಳಲ್ಲಿರುವುದರಿಂದ ಇದು ಅಷ್ಟು ಪ್ರಖ್ಯಾತವಾಗಿದೆ. ಕೃಷ್ಣಾಷ್ಟಮಿಯನ್ನು ಎರಡು ದಿನಗಳಲ್ಲಿ ಆಚರಿಸಲಾಗುತ್ತದೆ. ಮೊದಲನೆ ದಿನ ಹುಟ್ಟಿದ ಸಂಭ್ರಮವಾದರೆ ಮಾರನೆಯ ದಿನ ಕಾರ್ಯಕ್ರಮಗಳು ವಿಜೃಂಭಿಸುತ್ತವೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡುಗಳಲ್ಲಿ  ಕೃಷ್ಣಾಷ್ಟಮಿ ಬಹಳ ವೈಭವೋಪೇತವಾಗಿ ನಡೆಯುತ್ತದೆ.ಉತ್ತರಭಾರತದಲ್ಲಿ ಅದರಲ್ಲೂ ಪ್ರಮುಖವಾಗಿ ಮಥುರಾದಲ್ಲಿ ಜುಲನೋತ್ಸವ ಪ್ರಸಿದ್ಧಿ.ದೇವಸ್ಥಾನಗಲ್ಲಿ ,ಮನೆಮನೆಗಳಲ್ಲಿ ಉಯ್ಯಾಲೆ ತೊಟ್ಟಿಲು ಕಟ್ಟುತ್ತಾರೆ.ಅಷ್ಟಮಿಗೆ ತಿಂಗಳ ಮುಂಚೆಯೇ ಈ ತಯಾರಿ ,ಸಂಭ್ರಮ ನಡೆಯುತ್ತದೆ.
          ಜನ್ಮಾಷ್ಟಮಿಯಂದು ಅನೇಕ ಆಧ್ಯಾತ್ಮಿಕ ಆಚರಣೆ ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಉದಾಹರಣೆಗೆ: ಉಪವಾಸಮಾಡುವುದು ಈ ಹಿಂದೂ ಹಬ್ಬದಲ್ಲಿ ಸಾಮಾನ್ಯ ಆಚರಣೆಯಾಗಿದೆ. ಇದನ್ನು ಜನ್ಮಾಷ್ಟಮಿ ವ್ರತವೆಂದು ಕರೆದು, ಕೃಷ್ಣನ ಭಕ್ತರು 24 ಗಂಟೆಗಳ ಕಾಲ ಉಪವಾಸವನ್ನು ಮಾಡುತ್ತಾರೆ. ಜನ್ಮಾಷ್ಟಮಿ ಉಪವಾಸಮಾಡುವಾಗ ಕೆಲವರು ಹಣ್ಣನ್ನು ತಿಂದರೆ ಇನ್ನುಳಿದವರು ಏನನ್ನೂ ತಿನ್ನದೆ ಕೇವಲ ನೀರನ್ನು ಮಾತ್ರ ಕುಡಿದು ಮಧ್ಯರಾತ್ರಿಯವರೆಗೆ ಪ್ರಾರ್ಥನೆ ಮಾಡುತ್ತಿರುತ್ತಾರೆ. ಶ್ರೀ ಕೃಷ್ಣನು ಮಧ್ಯರಾತ್ರಿ 12 ಗಂಟೆಗೆ ಜನ್ಮತಾಳಿದನೆಂದು ಜನಗಳ ನಂಬಿಕೆ. ಈ ಸಮಯದಲ್ಲಿಯೇ ಭಕ್ತರು ತುಂಟ ಮಾಖನ್ ಚೋರ್' (ಬೆಣ್ಣೆ ಕಳ್ಳ) ಕೃಷ್ಣನನ್ನು ಕುರಿತು ಪ್ರಾರ್ಥನೆ ಮಾಡಿದ ನಂತರ ಉಪವಾಸವನ್ನು ಕೊನೆಗೊಳಿಸುತ್ತಾರೆ. ಹೀಗೆ ಜನ್ಮಾಷ್ಟಮಿಯಂದು ಉಪವಾಸವನ್ನು ಶ್ರದ್ಧೆಯಿಂದ ಆಚರಿಸುವುದರಿಂದ ಸಾಧಾರಣವಾಗಿ ಏಕಾದಶಿಯಂದು ಉಪವಾಸ ಆಚರಿಸುವುದಕ್ಕಿಂತಾ ಒಂದು ಸಾವಿರ ಪಟ್ಟು ಹೆಚ್ಚು ಪರಿಣಾಮಕಾರಿಯೆಂದು ಭಕ್ತರ ನಂಬಿಕೆ. ಈ ಸಂದರ್ಭದಲ್ಲಿ ತಯಾರಿಸುವ ತಿಂಡಿಗಳು ಹೆಚ್ಚಾಗಿ ಹಾಲಿನಿಂದಲೇ ಮಾಡಲಾಗುತ್ತದೆ.ಕೃಷ್ಟ್ಣನಿಗೆ ಹಾಲಿನಿಂದಲೇ ಮಾಡಿದ ತಿಂಡಿಗಳು ತುಂಬಾ ಇಷ್ಟ.ಹಾಲಿನ ಖೀರ್,ಹಾಲಿನ ಪೇಡ,ಗುಲಾಬ್ ಜಾಮೂನ್ ಮುಂತಾದ ಸಿಹಿತಿಂಡಿಗಳನ್ನೆ ಮಾಡುತ್ತಾರೆ. ಇನ್ನು ಶ್ರೀಕಂಡ ಪೂರಿ ತಯಾರಿಸುತ್ತಾರೆ.ತಮಿಳುನಾಡಿನಲ್ಲಿ ಮುರುಕ್ಕ ಮತ್ತು ಸೀದೈ ಅಂದಿನ ಮುಖ್ಯ ತಿಂಡಿಗಳಲ್ಲಿ ಒಂದು.ಕರ್ನಾಟಕದ ಕೆಲವು ಕಡೆಗಳಲ್ಲಿ ಚಕ್ಕುಲಿ,ಅವಲಕ್ಕಿ,ಮತ್ತು ಬೆಲ್ಲದ ಪಾನಕ ಮಾಡುತ್ತಾರೆ.ಭಕ್ತ ಕುಚೇಲನ ನೆನಪಿಗಾಗಿ ಮನೆಯಲ್ಲಿ ತಯಾರಿಸಿದ ಅವಲಕ್ಕಿಯನ್ನೆ ಬಳಸುತ್ತಾರೆ.
          ಇನ್ನು ನಾಡಿನ ಎಲ್ಲಾ ಕಡೆ ಮುದ್ದು ಕೃಷ್ಣನ  ವೇಷ ಎಲ್ಲರ ಮನಸೂರೆಗೊಳ್ಳುವಂತದ್ದು. ಶಾಲಾ ಮಕ್ಕಳಲ್ಲೆ ಹೆಚ್ಚಾಗಿ ನಡೆಯುವ ಈ ಸ್ಪರ್ಧೆಯಲ್ಲಿ ಜಾತಿ ಮತ ಭೇಧವಿಲ್ಲದೆ ಮಕ್ಕಳು ಭಾಗವಹಿಸುತ್ತಾರೆ.ಮಕ್ಕಳ ಮುದ್ದಾದ ಮುಖಕ್ಕೆ ನೀಲಮೇಘ ಬಣ್ಣ ಹಚ್ಚಿ, ತಲೆಗೊಂದು ಪುಟ್ಟ ಕಿರೀಟ ಇಟ್ಟಾಗ ಅದು ಸಾಕ್ಷಾತ್ ಕೃಷ್ಣನೇ ಎದುರು ಬಂದಂತೆ.! ಈಕೃಷ್ಣ್ನ ವೇಷಕ್ಕೆ ಪ್ರತಿ ಮಗುವೂ ಆಸಕ್ತಿ  ತೋರುವುದು ಅದೊಂದು ಪವಾಡವೆ ಸೈ!

ಸಮಸ್ತ ನಾಡ ಸಜ್ಜನರಿಗೆ ಶ್ರೀ ಕೃಷ್ಣಾಷ್ಟಮಿ ಶುಭಾಶಯಗಳು..


ಶ್ರೀ ಕೃಷ್ಣಾಷ್ಟಮಿ ಸಂಭ್ರಮದ ಫೋಟೋ ಕ್ಲಿಕ್ಕುಗಳು 







ಕೃಪೆ: ಗೂಗಲ್ , 
ಅದ್ಭುತ ಫೋಟೋಗ್ರಾಫಿಗೆ ಶಾಲಾ ತಂಡದ ನಮನಗಳು.

No comments: